ವಿವೇಕಾನಂದರಿಗೆ ನುಡಿ ನಮನ - ಇಂದು ರಾಷ್ಟ್ರೀಯ ಯುವ ದಿನ
‘ಸ್ವಾಮಿ ವಿವೇಕಾನಂದರಾಗುವ ಮೊದಲು ಅಂದರೆ, ಇವರ ಪೂರ್ವಾಶ್ರಮದ ಹೆಸರು ನರೇಂದ್ರನಾಥ ದತ್ತ. 1862 ಜನವರಿ 12ರಂದು ಜನಿಸಿದ ನರೇಂದ್ರ, ಮುಂದೆ ಇಡೀ ದೇಶದ ಶಕ್ತಿಯಾಗಿ ಬೆಳೆದರು. ಅತ್ಯಂತ ಚೂಟಿ ಮತ್ತು ತುಂಟತನದ ಸ್ವಭಾವದ ಈ ಬಾಲಕನಲ್ಲಿದ್ದ ಅಧಮ್ಯ ಚೇತನವನ್ನು ಮೊದಲು ಗುರುತಿಸಿದ್ದು ಶಿವಭಕ್ತೆಯಾಗಿದ್ದ ವಿವೇಕಾನಂದರ ತಾಯಿ ಭುವನೇಶ್ವರಿ ದೇವಿ. ತನ್ನ ಶಿವಪೂಜೆಯ ಫಲವಾಗಿ ಹುಟ್ಟಿದ್ದ ಮಗ ನರೇಂದ್ರ, ಸಾಕ್ಷಾತ್ ಶಿವನೇ ಎಂದು ನಂಬಿದ್ದರು ಅವರು. ನರೇಂದ್ರ ಪುಟ್ಟ ಮಗುವಾಗಿದ್ದಾಗಲೇ ರಾಮಾಯಣ, ಮಹಾಭಾರತ, ಪುರಾಣಗಳನ್ನು ಓದಿ ತಿಳಿಸಿದ್ದರು ತಾಯಿ ಭುವನೇಶ್ವರಿ ದೇವಿ. ವೃತ್ತಿಯಲ್ಲಿ ವಕೀಲರಾಗಿದ್ದ ತಂದೆ ವಿಶ್ವನಾಥದತ್ತ, ದೈವಭಕ್ತರಲ್ಲದಿದ್ದರೂ ಜನಾನುರಾಗಿಗಳಾಗಿದ್ದರು. ಸಾಕಷ್ಟು ದಾನ ಧರ್ಮ ಮಾಡಿ ಜನರ ಪ್ರೀತಿ ಸಂಪಾದಿಸಿಕೊಂಡಿದ್ದರು. ಇಂಥ ಆದರ್ಶ ತಂದೆ-ತಾಯಿಗಳ ಆರೈಕೆಯಲ್ಲಿ ಬೆಳೆದ ನರೇಂದ್ರನಿಗೆ ದೈವಭಕ್ತಿ, ದೇಶಭಕ್ತಿ, ತೀಕ್ಷ್ಣ ಬುದ್ಧಿಶಕ್ತಿ, ಆತ್ಮವಿಶ್ವಾಸ, ನಿರ್ಭಯತೆ ಮತ್ತು ದೃಢತೆ, ಜನ್ಮದತ್ತವಾಗಿ ಬಂದಿತ್ತು.
ಅಮೇರಿಕಾದ ಚಿಕಾಕೋದಲ್ಲಿ ನಡೆದ ‘ಸರ್ವ ಧರ್ಮ ಸಮ್ಮೇಳನ’ದಲ್ಲಿ ಮಾತನಾಡಿ, ‘ಭಾರತೀಯ ಸಂಸ್ಕೃತಿ ಮತ್ತು ಹಿಂದೂ ಧರ್ಮದ ಮೌಲ್ಯ’ದ ಪರಿಚಯ ಮಾಡಿಕೊಟ್ಟ ವಿವೇಕಾನಂದರ ಭಾಷಣ ವಿಶ್ವ ವಿಖ್ಯಾತವಾಗಿದೆ. ‘ಅಮೇರಿಕಾದ ಸಹೋದರ ಸಹೋದರಿಯರೇ’ ಎಂಬ ಸಂಬೋಧನೆಯೊಂದಿಗೆ ಪ್ರಾರಂಭವಾದ ವಿವೇಕಾನಂದ ಭಾಷಣ ಅಲ್ಲಿ ನೆರೆದಿದ್ದ ಅಸಂಖ್ಯ ಜನರ ಚಿತ್ತವನ್ನು ಗೆದ್ದಿತ್ತು. ಪಾಶ್ಚಾತ್ಯರಿಂದ ‘ವಿಚಿತ್ರ ಧರ್ಮ’ ಎಂದು ಕರೆಯಿಸಿಕೊಂಡಿದ್ದ ಹಿಂದೂ ಧರ್ಮದ ನಿಜವಾದ ಅರ್ಥವನ್ನು,ಸಿದ್ಧಾಂತಗಳನ್ನು ಪಾಶ್ಚಾತ್ಯರಿಗೆ ಮನದಟ್ಟು ಮಾಡುವಲ್ಲಿ ಸ್ವಾಮಿ ವಿವೇಕಾನಂದ ಯಶಸ್ವಿಯಾದರು. ವಿಶ್ವ ಪರ್ಯಟನೆ ಮಾಡಿ ಹಿಂದೂ ಧರ್ಮದ ಸಿದ್ಧಾಂತಗಳು ಹಾಗೂ ಮೌಲ್ಯಗಳನ್ನು ಪರಿಚಯ ಮಾಡಿಕೊಟ್ಟ ಸ್ವಾಮಿ ವಿವೇಕಾನಂದರ ಎಲ್ಲಾ ಭಾಷಣಗಳು ಈಗ ಪುಸ್ತಕ ರೂಪದಲ್ಲಿವೆ. ಅವುಗಳನ್ನು ಹಿಂದೂ ಧರ್ಮದ ಯೋಗ ಸಿದ್ಧಾಂತಗಳಾಗಿ ಪರಿಗಣಿಸಲಾಗಿದೆ. ಅಮೇರಿಕಾದ ‘ಸರ್ವಧರ್ಮ ಸಮ್ಮೇಳನ’ದ ನಂತರ ತಾಯ್ನಾಡಿಗೆ ಮರಳಿದ ವಿವೇಕಾನಂದರು ಗುರು ರಾಮಕೃಷ್ಣ ಪರಮಹಂಸರ ಸ್ಮರಣಾರ್ಥ 1892, ಮೇ 1ರಂದು ‘ರಾಮಕೃಷ್ಣ ಮಿಶನ್’ ಸ್ಥಾಪಿಸಿದರು.
ಶ್ರೀರಾಮಕೃಷ್ಣ ಪರಮಹಂಸರು ತಮ್ಮ ಆಧ್ಯಾತ್ಮಿಕ ಅನುಭವಗಳಿಂದ ಬೋಧಿಸಿದ ವೇದಾಂತ 'ಆತ್ಮನೋ ಮೋಕ್ಷಾರ್ಥಮ್ ಜಗದ್ ಹಿತಾಯ ಚ' ಎಂಬ ಧ್ಯೇಯವಾಕ್ಯವನ್ನು ಹೊಂದಿರುವ ಈ ಸಂಸ್ಥೆ ವಿವೇಕಾನಂದರಿಂದ ಜಗತ್ಪ್ರಸಿದ್ಧವಾಯ್ತು. ಹಿಂದೂ ಧಾರ್ಮಿಕ ಮತ್ತು ಸಾಮಾಜಿಕ ಸಂಸ್ಥೆಯಾಗಿ ರಾಮಕೃಷ್ಣ ಮಿಶನ್ಗುರುತಿಸಿಕೊಂಡಿತು.
ಕಾಳಿಯ ಆರಾಧಕರಾಗಿದ್ದ ರಾಮಕೃಷ್ಣ ಪರಮಹಂಸರು ಹಾಗೂ ಅವರ ಪತ್ನಿ ಮಾತೆ ಶಾರದಾ ದೇವಿಯವರ ನೆಚ್ಚಿನ ಶಿಷ್ಯರಾಗಿದ್ದ ವಿವೇಕಾನಂದರು, ತಮ್ಮದೇ ಆದ ವೈಚಾರಿಕ ನೆಲೆಯಲ್ಲಿ ತಮ್ಮನ್ನು ಗುರುತಿಸಿಕೊಂಡರು.
‘ಸುಖಕ್ಕಿಂತ ದುಃಖವೇ, ಐಶ್ವರ್ಯಕ್ಕಿಂತಲೂ ದಾರಿದ್ರ್ಯವೇ,
ಹೊಗಳಿಕೆಗಿಂತಲೂ ಪೆಟ್ಟುಗಳೇ ಮನುಷ್ಯನಲ್ಲಿ ಅಡಕವಾಗಿರುವ ಅಂತರಾಗ್ನಿಯನ್ನು
ಹೊರಗೆಡಹುತ್ತದೆ’ ಎಂದು ಬೋಧಿಸಿದ ವಿವೇಕಾನಂದರು ಬಡವರ, ನೊಂದವರ, ಸಮಾಜದಲ್ಲಿ
ತುಳಿತಕ್ಕೊಳಗಾದವರ ಕಷ್ಟಕ್ಕೆ ಸ್ಪಂದಿಸಿದರು. ‘ಒಂದು ಆದರ್ಶವನ್ನು, ಗುರಿಯನ್ನು
ಕೈಗೆತ್ತಿಕೊಳ್ಳಿ. ಕೇವಲ ಆ ಗುರಿಯ ಬಗ್ಗೆ ಮಾತ್ರ ಯೋಚಿಸಿ, ಚಿಂತಿಸಿ. ನಿಮ್ಮ ಬದುಕನ್ನೇ
ಅದಕ್ಕಾಗಿ ಮುಡಿಪಾಗಿಡಿ. ಆ ಗುರಿಯು ನಿಮ್ಮ ಬುದ್ಧಿ, ಮನಸ್ಸು, ಇಂದ್ರಿಯಗಳು,
ನರ-ನಾಡಿಗಳನ್ನೆಲ್ಲ ವ್ಯಾಪಿಸಲಿ. ಬೇರೆಲ್ಲ ಆಲೋಚನೆಗಳನ್ನು ಬದಿಗಿಡಿ. ಇದೇ ಯಶಸ್ಸಿನ
ಏಕಮಾತ್ರ ಸೂತ್ರ!’ ಇದು ಯುವ ಶಕ್ತಿಗಳಲ್ಲಿರುವ ಉತ್ಸಾಹವನ್ನು ಬಡಿದೆಬ್ಬಿಸಲು
ವಿವೇಕಾನಂದರು ಘೋಷಿಸಿದ ಪ್ರೋತ್ಸಾಹ ವಾಕ್ಯ. ಇದು ಬಿಸಿರಕ್ತದ ಯುವ ಚೈತನ್ಯವನ್ನು
ಜಾಗೃತಗೊಳಿಸುವ ಮಂತ್ರವಾಯಿತು. ಗಾಂಭೀರ್ಯ, ಸರಳತೆ, ಧೈರ್ಯ, ಅಸ್ವಾರ್ಥತೆ, ದಯೆ,
ಸೇವಾಶಕ್ತಿಯಿಂದಲೇ ದೇಶದ ಜನತೆಯನ್ನು ಗೆದ್ದ ಸ್ವಾಮಿ ವಿವೇಕಾನಂದರು ತಮ್ಮ 29 ನೇ
ವಯಸ್ಸಿನಲ್ಲಿ ಧೈವಾಧೀನರಾದರು. ಅತೀ ಚಿಕ್ಕ ವಯಸ್ಸಿನಲ್ಲಿ ಮಹಾ ಸಾಧನೆ ತೋರಿದ ಈ ಶಕ್ತಿ
ಅಸ್ತಂಗತವಾದ ದಿನ 1902ರ ಜುಲೈ 4.
ಯುವ ಜನತೆಗೆ ಪ್ರೋತ್ಸಾಹಿಸಿ, ಆ ಮೂಲಕ ಯಶಸ್ವಿ ಮಾರ್ಗವನ್ನು ಸೂಚಿಸಿದ ಸ್ವಾಮಿ ವಿವೇಕಾನಂದರ ೧೫೦ನೇ ಜನ್ಮದಿನಾಚರಣೆ ಇವತ್ತು. ಯುವ ಶಕ್ತಿಯ ದ್ಯೋತಕವಾಗಿದ್ದ ವಿವೇಕಾನಂದರ ಸ್ಮರಣಾರ್ಥ ಇಂದು ರಾಷ್ಟ್ರೀಯ ಯುವ ದಿನವನ್ನಾಗಿ ರಾಷ್ಟ್ರಾದ್ಯಂತ ಆಚರಿಸಲಾಗುತ್ತದೆ.
ಎಲ್ಲರಿಗೂ ರಾಷ್ಟ್ರೀಯ ಯುವ ದಿನದ ಹಾರ್ದಿಕ ಶುಭಾಶಯಗಳು
ಯುವ ಜನತೆಗೆ ಪ್ರೋತ್ಸಾಹಿಸಿ, ಆ ಮೂಲಕ ಯಶಸ್ವಿ ಮಾರ್ಗವನ್ನು ಸೂಚಿಸಿದ ಸ್ವಾಮಿ ವಿವೇಕಾನಂದರ ೧೫೦ನೇ ಜನ್ಮದಿನಾಚರಣೆ ಇವತ್ತು. ಯುವ ಶಕ್ತಿಯ ದ್ಯೋತಕವಾಗಿದ್ದ ವಿವೇಕಾನಂದರ ಸ್ಮರಣಾರ್ಥ ಇಂದು ರಾಷ್ಟ್ರೀಯ ಯುವ ದಿನವನ್ನಾಗಿ ರಾಷ್ಟ್ರಾದ್ಯಂತ ಆಚರಿಸಲಾಗುತ್ತದೆ.
ಎಲ್ಲರಿಗೂ ರಾಷ್ಟ್ರೀಯ ಯುವ ದಿನದ ಹಾರ್ದಿಕ ಶುಭಾಶಯಗಳು